ಸೋಮವಾರ, ಜುಲೈ 4, 2016

ಹೃದಯ ಹಾಡಿತು


  ಅಂಬರೀಶ್ ಅಭಿನಯದ ಒಂದು ಸುಂದರ ಪ್ರೇಮ ಕಥೆ ಒಳಗೊಂಡ ಚಿತ್ರ ಹೃದಯ ಹಾಡಿತು. ತ್ರಿಕೋನ ಪ್ರೇಮ ಕಥೆಯನ್ನು ಹೊಂದಿರುವ ಈ ಚಿತ್ರ. ಮತ್ತು ಚಿತ್ರದ ಹಾಡುಗಳು ಕನ್ನಡ ಪ್ರೆಕ್ಷಕ ಎಂದಿಗೂ ಮರೆಯದಂತೆ ಮಾಡಿದೆ. ಲವ್ ಜೊತೆಗಿನ ಸೆಂಟಿಮೆಂಟ್ ಚಿತ್ರದ ಹೈಲೈಟ್ ಅಂತಾನೇ ಹೇಳ್ಬೋದು. ಅಂಬರೀಶ್ ಅಭಿನಯದ ಚಿತ್ರಗಳಲ್ಲಿ ಹೃದಯ ಹಾಡಿತು ಚಿತ್ರ ವಿಭಿನ್ನವಾದದ್ದು ಎಂದರೆ ತಪ್ಪಾಗಲಾರದು.
  ಇಂತ ಒಂದು ಕಥೆಯನ್ನು ಚಿತ್ರವನ್ನಾಗಿ ಮಾಡಿದವರು ನಿರ್ದೇಶಕ ಎಂ.ಎಸ್ ರಾಜಶೇಖರ್, ಈ ಚಿತ್ರಕ್ಕೆ ಚಿತ್ರಕಥೆಯನ್ನು ಮಾಡಿದವರು ಕನ್ನಡದ ಹೆಸರಾಂತ ಚಿತ್ರ ಸಾಹಿತಿ ಚಿ ಉದಯಶಂಕರ್, ಕಥೆಯ ವಿವಿಧ ಮಜಲುಗಳನ್ನು ತಮ್ಮ ಕಲ್ಪನಾ ಲೋಕದಲ್ಲಿ ವಿರಮಿಸುತ್ತಾ, ಉದಯಶಂಕರ್ ಚಿತ್ರ ಕಥೆಯನ್ನು ಮಾಡಿದ್ದಾರೆ. ಚಿತ್ರ ನೋಡಿದ ಪ್ರೇಕ್ಷಕನಿಗೆ ಇದರ ಅನುಭವ ಆಗುವುದಂತೂ ಕಂಡಿತ.
 ರೆಬಲ್ ಸ್ಟಾರ್ ಅಂಬರೀಶ್ ನಾಯಕ ನಟನಾಗಿ ಅಬಿನಯಿಸಿದ ಹೃದಯ ಹಾಡಿತು ಚಿತ್ರದಲ್ಲಿ ಮಾಲಶ್ರೀ ಮತ್ತು ಭವ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಅಶ್ವತ್ ಕೂಡ ಚಿತ್ರದಲ್ಲಿ ಅಭಿನಯಿಸಿ ತಮ್ಮ ನಟಾನಾ ಕೌಶಲ್ಯವನ್ನು ಮೆರೆದಿದ್ದಾರೆ. ಉಳಿದಂತೆ ಸುಂದರ್ ಕೃಷ್ಣ ಅರಸ್, ಗಿರಿಜಾ ಲೋಕೇಶ್, ಎಂ.ಎಸ್ ಉಮೇಶ್, ಬಾಲರಾಜ್ ಮೊದಲಾದವರನ್ನ ಈ ಚಿತ್ರದಲ್ಲಿ ಕಾಣಬಹುದು.
  ಇನ್ನೂ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಉಪೇಂದ್ರ ಕುಮಾರ್, ಚಿತ್ರದಲ್ಲಿ 5 ಹಾಡುಗಳಿದ್ದು ಬಹುತೇಕ ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ ಚಿ ಉದಯ ಶಂಕರ್. ಎಸ್.ಪಿ. ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್ ಜೊತೆಗೆ ಡಾ. ರಾಜ್‍ಕುಮಾರ್ ಚಿತ್ರದ ಒಂದು ಹಾಡಿಗೆ ತಮ್ಮ ಮಧುರವಾದ ಕಂಠವನ್ನು ನೀಡಿದ್ದಾರೆ. ಚಿತ್ರದ ಹಾಡುಗಳು ಸುಮಧುರವಾಗಿ ಮೂಡಿಬಂದಿವೆ.
  1991ರಲ್ಲಿ ಬಿಡುಗಡೆಯಾದ ಹೃದಯ ಹಾಡಿತು ಚಿತ್ರಕ್ಕೆ ಕರ್ನಾಟಕ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್‍ಗೆ ಸಂದಿತ್ತು ಮತ್ತು ಡಾ. ರಾಜ್ ಕುಮಾರ್ ಹಾಡಿದ ನಲಿಯುತಾ ಹೃದಯ ಹಾಡನು ಹಾಡಿದೆ ಹಾಡು ಎಲ್ಲರ ಬಾಯಲ್ಲೂ ಹರಿದಾಡುವಂತೆ ಮಾಡಿತು. ಇದೂ ಹೆಚ್ಚೂ ಪ್ರೇಕ್ಷಕರನ್ನು ಮುಟ್ಟಿತ್ತು. ಒಂದು ಯಶಸ್ವಿ ಚಿತ್ರ ಹೃದಯ ಹಾಡಿತು ಚಿತ್ರ.
  ಹೃದಯ ಹಾಡಿತು ಚಿತ್ರ ಹಾರ್ಟ್ ಪೇಷಂಟ್ ಮತ್ತು ಡಾಕ್ಟರ್ ನಡುವೆ ನಡೆಯುವ ಪ್ರೇಮ ಕಥೆ ಅದರ ಸವಿಯಾದ ದೃಶ್ಯಗಳನ್ನ  ನೋಡ್ಬೇಕು ಅಂದ್ರೆ ನೀವು ಚಿತ್ರವನ್ನೇ ನೋಡ್ಬೇಕು. 
ಮಂಜುನಾಥ್ ಹೆಚ್.ಆರ್.



ಶನಿವಾರ, ಜುಲೈ 2, 2016

ಬಹದ್ದೂರ್ ಗಂಡು


  ಬಹದ್ದೂರ್ ಗಂಡು ಚಿತ್ರ ಕಥೆಯಲ್ಲಾಗಲಿ, ಆ ಚಿತ್ರದಲ್ಲಿ ನಟಿಸಿದ ನಟರಲ್ಲಾಗಲಿ, ಯಾವುದೇ ವಿಷಯವನ್ನ ತೆಗೆದುಕೊಂಡ್ರು ಬದಲಾವಣೆಯನ್ನ ಬಯಸಿದ ಕನ್ನಡ ಸಿನಿ ಪ್ರಿಯನಿಗೆ ಇಷ್ಟವಾಗುವ ರೀತಿಯಲ್ಲಿ ಮೂಡಬಂದಿತ್ತು. ರಾಜ ಸಂಸ್ಥಾನ ಮತ್ತು ಪ್ರಜೆಗಳ ನಡುವಿನ ಸಮರಸದ ಭಾವನೆಯನ್ನು ಮೂಡುವ ಮನಂರಜನೆ, ಪ್ರೀತಿ, ಪ್ರೇಮ, ಮತ್ತು ಹಾಸ್ಯವನ್ನ ಈ ಚಿತ್ರದಲ್ಲಿ ಕಾಣಬಹುದು.
  ಬಹದ್ದೂರ್ ಗಂಡು ಚಿತ್ರದಲ್ಲಿ ದೊಡ್ಡ ತಾರಾಬಳಗದ ದಂಡೇ ಇದೆ. ರಾಜ್ ಕುಮಾರ್ ಜೊತೆಗೆ ಆರತಿ ಮತ್ತು ಜಯಂತಿ ನಾಯಕಿಯಾಗಿ ಕಾಣಿಸಿಕೊಂಡ್ರೆ, ಖಳ ನಟನಾಗಿ ವಜ್ರಮುನಿ ಎಲ್ಲರ ಮಾತುಗಳಲ್ಲಿ ಹರಿದಾಡುವಂತೆ ಮಾಡಿದ್ದಾರೆ. ಪೋಷಕನ ಪಾತ್ರದಲ್ಲಿ ಬಾಲಕೃಷ್ಣನ ಅಭಿನಯ ಎಂತಹವರು ನೆನಪು ಮಾಡಿಕೊಳ್ಳುವಂತೆ ಮಾಡುತ್ತೆ. ಉಳಿದಂತೆ ದ್ವಾರಕೀಶ್, ತೂಗುದೀಪ ಶ್ರೀನಿವಾಸ್, ರಾಜಶಂಕರ್ ಅಭಿನಯ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ.
  ಆಗ ಚಿತ್ರಗಳಿಗೆ ಸಂಗೀತ ನೀಡುವುದರಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಎಂ. ರಂಗರಾಜನ್  ಬಹದ್ದೂರ್ ಗಂಡು ಚಿತ್ರಕ್ಕೆ ಕೂಡ ಸಂಗೀತ ನೀಡಿದ್ರು. ಈ ಚಿತ್ರದ ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆದವರು ಚಿ. ಉದಯಶಂಕರ್, ಚಿತ್ರ ಸಾಹಿತ್ಯ ಬರೆಯುವುದರಲ್ಲಿ ಎತ್ತಿದ ಕೈ ಆಗಿದ್ದ ಇವರಿಗೆ ಹೆಚ್ಚು ಹೇಳಲೇ ಬೇಕಿಲ್ಲ. ಪಿ.ಬಿ ಶ್ರೀನಿವಾಸ್, ಎಸ್. ಜಾನಕಿ, ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ರಾಜ್ ಕುಮಾರ್ ಕೂಡ ಚಿತ್ರದಲ್ಲಿ ಹಾಡಿಗೆ ದ್ವನಿ ನೀಡಿದ್ದಾರೆ.
  ಒಂದು ಚಿತ್ರ ಅಚ್ಚು ಕಟ್ಟಾಗಿ, ಸುಂದರವಾಗಿ ಮೂಡಿಬರಬೇಕಾದರೆ, ಛಾಯಾಗ್ರಹಣದ ಕೈ ಚಳಕ ತುಂಬಾನೇ ಮುಖ್ಯವಾಗಿರುತ್ತೆ, ಈ ಚಿತ್ರಕ್ಕಾಗಿ ಕೈಯಲ್ಲಿ ಕ್ಯಾಮರ ಹಿಡಿದವರು ಎಸ್.ವಿ ಶ್ರೀಕಾಂತ್, ಇವರ ಸೃಜನಶೀಲ ಕ್ಯಾಮರ ವರ್ಕ್‍ನಿಂದ ಚಿತ್ರ ಅದ್ಬುತವಾಗಿ ಮೂಡಿಬಂದಿದೆ. ಕುದುರೆ ಸವಾರಿಯಲ್ಲಿನ ಸನ್ನಿವೇಶ, ನದಿ ದಾಟುವ ಸನ್ನಿವೇಶ ಮತ್ತು ಯುದ್ಧದ ಸನ್ನಿವೇಶಗಳು ಚಿತ್ರ ಯಶಸ್ಸಿಗೆ ಉದಾಹರಣೆಯ ಅಂಶಗಳು.
  ಬಹದ್ದೂರ್ ಗಂಡು ಚಿತ್ರ ನಿರ್ದೇಶನ ಮಾಡಿದವರು ಎ.ವಿ. ಶೇಷಗಿರಿ ರಾವ್, ಇವರ ಜೊತೆಗೆ ಚಿತ್ರಕಥೆಯನ್ನು ಬರೆದಿದ್ದಾರೆ ಚಿ ಉದಯಶಂಕರ್. ಇಂತ ಚಿತ್ರಕ್ಕೆ ಬಂಡವಾಳವನ್ನ ಹೂಡಿದ್ದಾರೆ ಶ್ರೀ ಕಾಂತ್ ನಹತಾ. ಬಹದ್ದೂರ್ ಗಂಡು ಚಿತ್ರ 1952ರಲ್ಲಿ ಹಿಂದಿ ಮತ್ತು ಉರ್ದು ಭಾಷೆಯಲ್ಲಿ ತೆರೆ ಕಂಡ ‘ಆನ್’ ಚಿತ್ರದಿಂದ ಸ್ಪೂರ್ತಿ ಪಡೆದ ಚಿತ್ರ, ಈ ಚಿತ್ರದಲ್ಲಿ ದಿಲೀಪ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮಂಜುನಾಥ ಹೆಚ್.ಆರ್.

ಮನೆ ದೇವ್ರು


  ಕೆ. ಭಾಗ್ಯರಾಜ್ ಕಥೆ ಬರೆದು ವಿ ರವಿಚಂದ್ರನ್ ಚಿತ್ರ ಕಥೆ ನಿರ್ದೇಶನವನ್ನು ಮಾಡಿದ ಚಿತ್ರ ಮನೆ ದೇವ್ರು. ಈ ಚಿತ್ರ ಸಂಪೂರ್ಣ ಕೌಟುಂಬಿಕ ಪ್ರದಾನವಾದದ್ದು. ಗಂಡ ಹೆಂಡತಿ ನಡುವಿನ ಸಣ್ಣ ವಿಚಾರವಾಗಿ ಬೇರೆಯಾಗುವ, ಗಂಡ ಹೆಂಡತಿಯರ ವಾಸ್ತವದ ಕಥೆಯನ್ನು ಬಿಂಬಿಸುತ್ತಿತ್ತು ಮನೆ ದೇವ್ರು ಚಿತ್ರ. ಈ ಚಿತ್ರದ ಈ ಹಾಡು ಮಧುರವಾಗಿದ್ದು ಕೇಳುಗರ ತಲೆ ದೂಗುವಂತೆ ಮಾಡುತ್ತದೆ.
 ಮನೆ ದೇವ್ರು ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕ ನಾಯಕನಾಗಿ ಅಭಿನಯಿಸಿದ್ರೆ ಇವರಿಗೆ ಜೋಡಿಯಾಗಿ ಸುಧಾರಾಣಿ ನಾಯಕಿಯಾಗಿ ಅಭಿನಯಿಸಿದ್ರು. ಅದು ಅಲ್ಲದೆ ಇವರು ಜೊತೆಯಾಗಿ ಅಭಿನಯಿಸಿದ ಮೊದಲ ಚಿತ್ರ ಕೂಡ ಇದು. ಇವರಲ್ಲದೆ ಕೆ.ಎಸ್. ಅಶ್ವತ್, ಟೆನ್ನಿಸ್ ಕೃಷ್ಣ, ಉಮೇಶ್, ಸತ್ಯಜಿತ್, ಕಾಶಿ ಮೊದಲಾದ ತಾರಾಗಣವನ್ನ ಚಿತ್ರದಲ್ಲಿ ನೋಡಬಹುದು. ರವಿ ಚಂದ್ರನ್ ಮತ್ತು ಹಂಸಲೇಖ ಜೋಡಿ ಅಂದ್ರೆ ಅಲ್ಲಿ ಸಂಗೀತದ ಹಬ್ಬ ಇರುತ್ತೆ, ಸುಮಧುರ ಗೀತೆಗಳ ಅನಾವರಣ ಅವರಿಂದ ಆಗುತ್ತೆ. ಸಂಗೀತದ ಮ್ಯಾಜಿಕ್ ಕಂಡಿತಾ ಆಗೋದಂತು ನಿಜ. ಮನೆ ದೇವ್ರು ಚಿತ್ರದಲ್ಲೂ ಕೂಡ ಇದೇ ರೀತಿ ಇಂಪಾದ ಗೀತೆಗಳ ಹೊನಲನ್ನ ಚೆಲ್ಲಿದ್ದಾರೆ ಹಂಸಲೇಖ ಇದಕ್ಕೆ ರವಿಚಂದ್ರನ್‍ರ ಸಾಥ್ ಕೂಡ ಇರೋದನ್ನ ಚಿತ್ರದಲ್ಲಿ ನೋಡ್ಬೋದು.
 ಇನ್ನೂ ಈ ಚಿತ್ರದಲ್ಲಿ ಇರೋದು 7 ಹಾಡುಗಳು ಒಂದಕ್ಕಿಂತ ಮತ್ತೊಂದು ವಿಭಿನ್ನ ವಿಚಿತ್ರ, ಹಾಗೂ ವಿಶೇಷವಾಗಿ ಮೂಡಿಬಂದಿವೆ. ಈ ಎಲ್ಲಾ ಹಾಡುಗಳಿಗೆ ತಮ್ಮ ಸುಮಧುರ ಕಂಠ ನೀಡಿದ್ದಾರೆ ಎಸ್.ಪಿ. ಬಾಲಸುಬ್ರಹ್ಮಣ್ಯಂ. ಇವರ ಜೊತೆಗೆ ಎಸ್ ಜಾನಕಿ, ಮಾನೋ, ಕೆ. ಎಸ್ ಚೈತ್ರ ಕೂಡ ತಮ್ಮ ಧ್ವನಿ ಗೂಡಿಸಿದ್ದಾರೆ. ಸುಮಧುರ ಹಾಡುಗಳನ್ನ ನೀಡುವುದಕ್ಕೆ ಅನುಕೂಲವನ್ನು ಮಾಡಿಕೊಟ್ಟಿದೆ.
 ಮನೆ ದೇವ್ರು ಚಿತ್ರಕ್ಕೆ ಕ್ಯಾಮರಾ ಹಿಡಿದವರು ಜಿ.ಎಸ್.ವಿ ಸಿತಾರಾಂ, ಕೌಟುಂಬಿಕ ಪ್ರದಾನ ಈ ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಮರೆಯುವ ಹಾಗಿಲ್ಲ ಹಾಗೆ ತಮ್ಮ ಜವಾಬ್ದಾರಿಯನ್ನ ನಿಭಾಯಿಸಿದ್ದಾರೆ. ಸಂಕಲನಕಾರನಾಗಿ ಕೆ. ಬಾಲು ಚಿತ್ರದ ಸಂಪೂರ್ಣ ಚಿತ್ರಣವನ್ನು ನೀಡುವಂತೆ ಮಾಡಿದ್ದಾರೆ. ಇವರೆಲ್ಲರ ಪರಿಶ್ರಮ ಮನೆ ದೇವ್ರು ಚಿತ್ರ ಎಂದರೆ ತಪ್ಪಾಗಲಾರದು. ಇದರ ಜೊತೆಗೆ ನಿರ್ದೇಶಕ ವಿ. ರವಿಚಂದ್ರನ್ ಪಾತ್ರ ಕೂಡ ಮನೋಜ್ಞವಾಗಿ ಮೂಡಿಬಂದಿದೆ.
ಮಂಜುನಾಥ್ ಹೆಚ್.ಆರ್.



ಮಂಗಳವಾರ, ಜೂನ್ 14, 2016

ಬಣ್ಣದ ಗೆಜ್ಜೆ


  ಇಂಪಾದ ಸಂಗೀತ, ಕಣ್ಣಿಗೆ ಮುದನೀಡುವಂತ ನೃತ್ಯ, ಸುಂದರ ಪ್ರೇಮ ಕಥೆ, ತಾಯಿ ಮಗನ ಸೆಂಟಿಮೆಟ್, ಕಥೆ ಅಥವಾ ಚಿತ್ರ ಕಥೆಯಲ್ಲಾಗಲಿ ಸೋಲಪ್ಪದ ನಿರ್ದೇಶಕರು, ಕ್ಯಾಮರ ಕಣ್ಣಿಂದ ಸೆರೆಯಾದ ಅದ್ಬುತ ದೃಶ್ಯಗಳು ಒಂದಕ್ಕಿಂತ ಮತ್ತೊಂದು ಹೆಚ್ಚು ಎನ್ನುವಂತೆ ಮೂಡಿ ಬಂದಿದೆ ಈ ಚಿತ್ರದಲ್ಲಿ. ಇಷ್ಟೆಲ್ಲಾ ಹೇಳಿದ ಮೇಲೆ ಯಾವುದು ಆ ಚಿತ್ರ ಅಂತ ನಿಮ್ಮ ತಲೆಯಲ್ಲಿ ಗಿರಕಿ ಹೊಡೆಯುತ್ತಿರಬಹುದು. ಅದೇ ‘ಬಣ್ಣದ ಗೆಜ್ಜೆ’.
  ಹೌದು ನಾನು ಬಣ್ಣದ ಗೆಜ್ಜೆ ಚಿತ್ರದ ಬಗ್ಗೆ ಮಾತನಾಡುತ್ತಾ ಇದ್ದಿನಿ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ನವ ನಟಿಯಾಗಿದ್ದ ‘ಅಮಲ’ ಜೋಡಿಯಾಗಿದ್ದರು. ಹಿರಿಯ ನಟಿ ಭಾರತಿ, ಒಂದು ಕಾಲದಲ್ಲಿ ಕನ್ನಡ ಚಿತ್ರ ರಂಗದಲ್ಲಿ ಹೆಸರು ಮಾಡಿದ್ದ ಕಲ್ಯಾಣ್ ಕುಮಾರ್ ಈ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ಉಳಿದಂತೆ ಸುರೇಶ್ ಹೆಬ್ಲಿಕರ್, ಅಮಜದ್ ಖಾನ್ ನಟರ ಜೊತೆಗೆ ದೇವರಾಜ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
  ಬಣ್ಣದ ಗೆಜ್ಜೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ. ಈ ಚಿತ್ರವನ್ನ ನಿರ್ದೇಶನ ಮಾಡಿರೋರು ರಾಜೇಂದ್ರ ಸಿಂಗ್ ಬಾಬು, ಕಥೆ ಚಿತ್ರ ಕಥೆಯನ್ನು ಮಾಡುವುದರ ಜೊತೆಗೆ ಚಿತ್ರಕ್ಕೆ ಬಂಡವಾಳವನ್ನು ಕೂಡ ಇವರೇ ಹೂಡಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಉತ್ತಮ ಕಥೆಯನ್ನು ಹೆಣೆಯುವರಲ್ಲಿ ಸಿದ್ದ ಹಸ್ತರು. ಅವರ ಕ್ರಿಯೇಟಿವಿಟಿ ಬಣ್ಣದ ಗೆಜ್ಜೆ ಸಿನಿಮಾದಲ್ಲಿ ನೋಡಬಹುದು. ಈ ಚಿತ್ರದ ಈ ಹಾಡು ಅವರೊಬ್ಬ ಉತ್ತಮ ನಿರ್ದೇಶಕ ಅನ್ನೋದನ್ನ ತಿಳಿಸುತ್ತೆ.
  ನಾದ ಬ್ರಹ್ಮ ಹಂಸಲೇಖ ಬಣ್ಣದ ಗೆಜ್ಜೆ ಸಿನಿಮಾಗೆ ಇಂಪಾದ ಸಂಗೀತವನ್ನ ನೀಡಿದ್ದಾರೆ. ಸ್ವಾತಿ, ಮುತ್ತಿನ ಮಳೆ ಹನಿಯೇ, ಪ್ರೇಮಾ ಗೀಮಾ ಜಾನೆ ತೋ, ಮೊದಲಾದ ಹಾಡುಗಳು ಸಂಗೀತ ಪ್ರಿಯರ ಬಾಯಲ್ಲಿ ಹರಿದಾಡಿದ್ದಂತೂ ನಿಜ. ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ ಹಂಸಲೇಖ, ಚಿತ್ರದ ಎಲ್ಲಾ ಹಾಡುಗಳಿಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್ ಜಾನಕಿ ದ್ವನಿ ನೀಡಿದ್ದಾರೆ. ಒಂದು ಹಾಡಿಗೆ ಲತಾ ಹಂಸಲೇಖ ತಮ್ಮ ದ್ವನಿ ನೀಡಿದ್ದಾರೆ. 
  ಬಣ್ಣದ ಗೆಜ್ಜೆ ಚಿತ್ರವನ್ನ ಸುಂದರವಾಗಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುವಂತೆ ಮಾಡಿದ್ದಾರೆ ಪಿ.ಎಸ್. ಪ್ರಕಾಶ್, ಮತ್ತು ಸಂಕಲನದ ಜವಾಬ್ದಾರಿಯನ್ನ ಹೊತ್ತಿದ್ದು ಗೌತಮ್ ರಾಜು. ಬಣ್ಣದ ಗೆಜ್ಜೆ ಚಿತ್ರ ಏಕ ಕಾಲದಲ್ಲಿ ತೆಲುಗು ಭಾಷೆಯಲ್ಲೂ ಕೂಡ ತೆರೆ ಕಂಡಿತ್ತು, ಬಹುತೇಕ ಬಣ್ಣದ ಗೆಜ್ಜೆ ಚಿತ್ರ ತಂಡವೇ ಈ ಚಿತ್ರದಲ್ಲಿ ಕೆಲಸ ಮಾಡಿತ್ತು. ಪ್ರೇಮ ಯುದ್ಧಂ ಹೆಸರಿನಲ್ಲಿ ತೆರೆಕಂಡ ಈ ಚಿತ್ರಕ್ಕೆ ನಾಗಾರ್ಜುನ್ ನಾಯಕ ನಟನಾಗಿ ಅಭಿನಯಿದ್ದರು. ಬಣ್ಣದ ಗೆಜ್ಜ ಚಿತ್ರ ಒಂದು ಸುಮಧುರವಾದ ಪ್ರೇಮ ಕಥೆ ಮತ್ತು ಇಂಪಾದ ಸಂಗೀತದ ಮಾಲೆ. ಇಂಥ ಚಿತ್ರ ಒಂದು ಹೊಸ ರೀತಿಯ ಅನುಭವವನ್ನು ನೀಡುತ್ತೆ. ಬಣ್ಣದ ಗೆಜ್ಜೆ.

ಮಂಜುನಾಥ್ ಹೆಚ್.ಆರ್.


ಸೋಮವಾರ, ಜೂನ್ 13, 2016

ಎಡಕಲ್ಲು ಗುಡ್ಡದ ಮೇಲೆ


  ಆರತಿ ಮತ್ತು ಜಯಂತಿ ಜೊತೆಯಾಗಿ ನಟಿಸಿದ ಚಿತ್ರ ‘ಎಡಕಲ್ಲು ಗುಡ್ಡದ ಮೇಲೆ’. ಒಂದು ರೊಮ್ಯಾಂಟಿಕ್ ಕಥಾ ಹಂದರವನ್ನು ಹೊಂದಿರುವ ಚಿತ್ರ. ಆಕಸ್ಮಿಕವಾಗಿ ಮಾಡಿದ ತಪ್ಪಿನಿಂದಾಗ ಮಾನಸಿಕ ತಳಮಳಕ್ಕೆ ಒಳಗಾಗುವ ಮಾಧವಿ ಪಾತ್ರದಲ್ಲಿ ಜಯಂತಿ ಅಭಿನಯ ನಿಜಕ್ಕೂ ಅದ್ಬುತವಾಗಿ ಮೂಡಿ ಬಂದಿದೆ. ಮಾಧವಿ ತಂಗಿಯ ಪಾತ್ರದಲ್ಲಿ ಆರತಿ, ದೇವಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ನಟನೆ ಚಿತ್ರಕ್ಕೆ ಹಾಕಿದ ತೋರಣದಂತೆ ಇದೆ.

 ಅದ್ಬುತ ಚಿತ್ರಗಳ ನಿರ್ದೇಶನಕ್ಕೆ ಹೆಸರಾದ ಕನ್ನಡದ ಸೃಜನಶೀಲ ನಿರ್ದೇಶಕ ‘ಪುಟ್ಟಣ್ಣ ಕಣಗಾಲ್’, ಇವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರವೇ ಎಡಕಲ್ಲಿ ಗುಟ್ಟದ ಮೇಲೆ. ಕಥೆ, ಚಿತ್ರಕಥೆ, ಸಂಭಾಷಣೆಯ ವಿಚಾರದಲ್ಲಿ ಈ ಚಿತ್ರದ ಪೂರ್ಣವಾದ ಚಿತ್ರಣವನ್ನ ನೀಡುತ್ತೆ. ವಿಭಿನ್ನ ಕಥಾ ಹಂದರ ಈ ಚಿತ್ರದಲ್ಲಿ ಕಾಣಬಹುದು. ಮುಖ್ಯವಾಗಿ ಇಲ್ಲಿ ನಾಯಕಿಗೆ ಹೆಚ್ಚಿನ ಪ್ರಾದಾನ್ಯತೆಯನ್ನ ನೀದಲಾಗಿದೆ.
 ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಎಂ. ರಂಗರಾವ್, ಈ ಚಿತ್ರದಲ್ಲಿ  ಒಟ್ಟು 8 ಹಾಡುಗಳಿವೆ. ಆರ್.ಎನ್ ಜಯಗೋಪಾಲ್, ಕೆ ಪ್ರಭಾಕರ ಶಾಸ್ತ್ರಿ, ವಿಜಯ ನಾರಸಿಂಹ, ಎಂ ನರೇಂದ್ರಬಾಬು ಹಾಡುಗಳಿಗೆ ಸಾಹಿತ್ಯವನ್ನ ಬರೆದಿದ್ದಾರೆ. ಎಸ್ ಜಾನಕಿ, ಪಿ ಸುಶೀಲ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಚಿತ್ರದ ಹಾಡುಗಳಿಗೆ ತಮ್ಮ ಗಾನ ಕಂಠವನ್ನು ನೀಡಿದ್ದಾರೆ. ಕೇಳಲು ಹಾಡುಗಳು ತಲೆತೂಗುವಂತೆ ಮಾಡುತ್ತವೆ.
 ಭಾರತೀಸುತ ಬರೆದಿರುವ ಅನೇಕ ಕಾದಂಬರಿಗಳು ತೆರೆ ಮೇಲೆ ರಾರಾಜಿಸಿದ್ದನ್ನ ಕಾಣಬಹುದು. ಅದರಲ್ಲಿ ಎಡಕಲ್ಲು ಗುಡ್ಡದ ಮೇಲೆ ಚಲನಚಿತ್ರವೂ ಕೂಡ ಒಂದು. ಇವರು ಬರೆದಿರುವ ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯನ್ನು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಚಿತ್ರವನ್ನಾಗಿ ಮಾಡಿದ್ದಾರೆ. ಕಾದಂಬರಿ ಓದುವುದರಿಂದ ಆಗುಂವತಹ ಅನುಭವ ಈ ಚಿತ್ರವನ್ನು ನೋಡಿದಾಗ ಸಿಗುವಂತಹ ಅನುಭವ ಎರಡು ಒಂದೇ ಎಂದರೆ ತಪ್ಪಾಗಲಾರದು. ಇದು ಚಿತ್ರ ನಿರ್ದೇಶನಕ್ಕೆ ಹಿಡಿದ ಕನ್ನಡಿ.
 ಕೇರಳದ ವೈನಾಡು ಜಿಲ್ಲೆಯಲ್ಲಿರುವ ಎಡಕಲ್ಲು ಒಂದು ಸುಂದರವಾದ ಪ್ರವಾಸಿ ತಾಣ, ಮತ್ತು ಕೊಡಗು ಪ್ರದೇಶಗಳಿಗೆ ಹತ್ತಿರವಿರುವ ಪ್ರೇಕ್ಷಣೀಯ ಸ್ಥಳ. ಇಂತ ಸ್ಥಳಗಳನ್ನು ತಮ್ಮ ಕ್ಯಾಮರ ಕಣ್ಣಿನ ಮೂಲಕ ಅದ್ಬುತವಾಗಿ ಸೆರೆಹಿಡಿದಿದ್ದಾರೆ ಎಸ್.ವಿ. ಶ್ರೀಕಾಂತ್, ಎಸ್.ಪಿ.ಎನ್ ಕೃಷ್ಣ ಮತ್ತು ಟಿ.ಪಿ. ವೇಲಾಯುದಮ್ ಉತ್ತಮವಾದ ಸಂಕಲನದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದನ್ನ ಚಿತ್ರದಲ್ಲಿ ನೋಡಿ ಸವಿಯಬೇಕು.
 ಜಯಂತಿ ಮತ್ತು ಆರತಿಯಲ್ಲದೆ ಚಂದ್ರಶೇಖರ್, ರಂಗ, ಶಿವರಾಂ ಅಭಿನಯ ಚಿತ್ರದಲ್ಲಿ ಸುಂದರವಾಗಿ ಮೂಡಿಬಂದಿದೆ. ಎಷ್ಟೂ ನೋಡಿದರು ನೋಡಲೇ ಬೇಕೆನ್ನುವ ಸುಂದರ ಹಾಡುಗಳು ಚಿತ್ರವನನ್ನು ನೋಡುವಂತೆ ಮಾಡುತ್ವೆ.
ಮಂಜುನಾಥ್ ಹೆಚ್.ಆರ್.

ಗುರುವಾರ, ಜೂನ್ 9, 2016

ಬಂಗಾರದ ಮನುಷ್ಯ




  ರಾಜ್‍ಕುಮಾರ್ ಅಭಿನಯದ ಚಿತ್ರಗಳೇ ಹಾಗೆ ಒಂದಕ್ಕಿಂತ ಮತ್ತೊಂದು ವಿಭಿನ್ನ, ವಿಶೇಷ ಮತ್ತು ವಿಶಿಷ್ಟವಾಗಿ ಇರುತ್ವೆ. ಹೆಚ್ಚಾಗಿ ಕೌಟುಂಬಿಕ ಚಿತ್ರಗಳಿಗೆ ಪ್ರಾಧನ್ಯತೆ ಕೊಡುತ್ತಿದ್ದ ಕಾಲದಲ್ಲಿ. ಕೌಟುಂಬಿಕದ ಜೊತೆಗೆ ಕೃಷಿಯ ಕುರಿತಾದ ಚಿತ್ರ ಇದು. ಇಡೀ ಚಿತ್ರವನ್ನು ನೋಡಿದ ಕನ್ನಡ ಪ್ರೇಕ್ಷಕನಿಂದಾಗಿ ಆ ಚಿತ್ರ ಬರೋಬ್ಬರಿ 2 ವರ್ಷಗಳ ಕಾಲ ಥಿಯೇಟರ್‍ನಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಿದ್ದ. ಒಂದು ಉತ್ತಮವಾದ ಸಂದೇಶದ ಜೊತೆಗೆ ಮನರಂಜನೆ ನೀಡಿದ ಚಿತ್ರವೇ ಬಂಗಾರದ ಮನುಷ್ಯ. 
   ತನ್ನ ಭಾವನ ಮರಣದಿಂದ ಆರಿದ ದೀಪವನ್ನು ಮತ್ತೆ ಬೆಳಗಲು ಅಕ್ಕನ ಮನೆಗೆ ಬರುತ್ತಾನೆ ರಾಜೀವ, ಕುಟುಂಬವನ್ನ ಒಂದು ಹಂತಕ್ಕೆ ತರಲು ಶ್ರಮಪಡುವ ನಾಯಕ ರಾಜೀವನÀ ಪಾತ್ರದಲ್ಲಿ ರಾಜ್‍ಕುಮಾರ್ ಅಭಿನಯ ನಿಜಕ್ಕೂ ಕನ್ನಡ ಪ್ರೇಕ್ಷಕ ಮರೆಯುವ ಹಾಗಿಲ್ಲ. ಅಂತಹ ಅದ್ಬುತ ಚಿತ್ರ ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜ್‍ಕುಮಾರ್ ಅಭಿನಯಿಸಿದ್ದಾರೆ. ಟಿ.ಕೆ ರಾಮ್‍ರಾವ್ ಅವರ ಕಾದಂಬರಿ ಆಧಾರಿತವಾದ ಈ ಚಿತ್ರವನ್ನು ನಿರ್ದೇಶನ ಮಾಡಿದವರು ಸಿದ್ದಲಿಂಗಯ್ಯ ಒಂದು ಉತ್ತಮ ಚಿತ್ರ ಕಥೆಯನ್ನು ಮಾಡಿಕೊಂಡು. ತಮ್ಮ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ್ದಾರೆ.
  ರಾಜ್‍ಕುಮಾರ್ ರಾಜೀವನ ಪಾತ್ರ ಮತ್ತು ಭಾರತಿ ಲಕ್ಷ್ಮಿಯ ಪಾತ್ರದಲ್ಲಿ ಅದ್ಬುತವಾದ ನಟನೆಯನ್ನು ಮಾಡಿದ್ದಾರೆ. ಹಳ್ಳಿ ಸೊಗಡಿನ ಹೆಣ್ಣಾಗಿ ಕಾಣಿಸಿಕೊಂಡಿರುವ ಭಾರತಿ ರಾಜ್‍ಕುಮಾರ್‍ಗೆ ಅದ್ಬುತ ಜೋಡಿ. ಇವರಿಬ್ಬರ ಕಾಂಬಿನೇಷನಲ್ಲಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಉಳಿದಂತೆ ವಜ್ರಮುನಿ, ಎಂ.ಪಿ ಶಂಕರ್, ಆರತಿ, ಬಾಲಕೃಷ್ಣ, ಶ್ರೀನಿವಾಸ್ ಮೊದಲಾದ ತಾರ ಬಳಗ ಚಿತ್ರಕ್ಕೆ ದುಡಿದಿದ್ದಾರೆ. ಇವರೆಲ್ಲರ ಉತ್ತಮವಾದ ಅಭಿನಯ ಚಿತ್ರದ ಯಶಸ್ಸಿಗೆ ಕಾರಣ ಎಂದರೆ ತಪ್ಪಾಗಲಾರದು.
  ಈ ಚಿತ್ರದ ಹಾಡುಗಳನ್ನ ಎಷ್ಟು ಕೇಳಿದರು ಕೇಳಬೇಕೆನ್ನಿಸುವ ಮನಸ್ಸಿಗೆ ಹಿತವೆನ್ನಿಸುವ ಸಂಗೀತ ಚಿತ್ರಕ್ಕಿದೆ. ಅದು ಜಿ.ಕೆ ವೆಂಕಟೇಶ್‍ರ ಕೈ ಚಳಕ ಅಂತಾನೇ ಹೇಳ್ಬೋದು. ಚಿತ್ರದಲ್ಲಿ ಐದು ಹಾಡುಗಳಿವೆ ಹುಣಸೂರು ಕೃಷ್ಣ ಮೂರ್ತಿ, ಆರ್ ಎನ್ ಜಯಗೋಪಾಲ್, ಚಿ ಉದಯ ಶಂಕರ್ ಮತ್ತು ವಿಜಯ ನಾರಸಿಂಹ ಸಾಹಿತ್ಯವನ್ನ ಬರೆದರೆ, ಪಿ.ಬಿ ಶ್ರೀನಿವಾಸ್, ಪಿ.ಸುಶೀಲ, ಮತ್ತು ಎಸ್.ಬಿ. ಬಾಲಸುಬ್ರಹ್ಮಣ್ಯಂ ಸಾಹಿತ್ಯಕ್ಕೆ ದ್ವನಿಯನ್ನು ನೀಡಿದ್ದರೆ. ಇವರಿಂದಾಗಿ ಚಿತ್ರ ಒಂದು ಹೆಜ್ಜೆ ಮುಂದೆ ಹೋಗಿದೆ.
ಕೌಟುಂಬಿಕ, ಮನರಂಜನೆಯ ಜೊತೆಗೆ ಸಂದೇಶವನ್ನು ಸಾರುವ ಈ ಚಿತ್ರಕ್ಕೆ ಅನೇಕ ಪ್ರಶಸ್ತಿಗಳ ಗರಿ ಮುಡಿಗೇರಿದೆ. 1971-72ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ, ಎರಡನೇ ಅತ್ಯುತ್ತಮ ಚಿತ್ರ, ಈ ಚಿತ್ರದಲ್ಲಿ ಅಭಿನಯಿಸಿದ ಬಾಲಕೃಷ್ಣರವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಚಿತ್ರಕಥೆಗಾಗಿ ಸಿದ್ದಲಿಂಗಯ್ಯನವರಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ, ಡಿ.ವಿ ರಾಜಾರಾಮ್‍ರಿಗೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ, ಸಂಕಲನಕ್ಕಾಗಿ ಪಿ. ಭಕ್ತವತ್ಸಲಂರಿಗೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಲಭಿಸಿವೆ. 1972ರ ಅತ್ಯುತ್ತಮ ಚಿತ್ರಗಳಲ್ಲೊಂದು ಬಂಗಾರದ ಮನುಷ್ಯ ಬಂಗಾರದ ಮನುಷ್ಯ ಒಂದು ಕೃಷಿ ಬದುಕಿನ ಚಿತ್ರಣವನ್ನು ತೆರೆದಿಡುವ ಒಂದು ಸ್ಪೂರ್ತಿದಾಯಕ ಚಿತ್ರ. ಇಂತ ಚಿತ್ರವನ್ನ ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು. 
                                                                      ಮಂಜುನಾಥ ಹೆಚ್.ಆರ್

ಭಾನುವಾರ, ಜೂನ್ 5, 2016

ಶಂಕರ್ ಗುರು


    ರಾಜ್‍ಕುಮಾರ್ ತ್ರಿ ಪಾತ್ರದಲ್ಲಿ ಅಂದರೆ ತಂದೆ ಇಬ್ಬರು ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರ ಶಂಕರ್ ಗುರು, ಈ ಚಿತ್ರದ ದೊಡ್ಡ ಸಕ್ಸಸ್ ಅಂದ್ರೆ ಸುಮಾರು ಒಂದು ವರ್ಷಗಳವರೆಗೆ ಈ ಚಿತ್ರ ಕರ್ನಾಟಕದ ಹಲವು ಚಿತ್ರ ಮಂದಿರಗಳಲ್ಲಿ ಅದ್ದೂರಿ ಪ್ರದರ್ಶನವನ್ನು ಕಂಡಿತ್ತು. ರಾಜ್‍ಕುಮಾರ್ ಏಕ ಪಾತ್ರದಲ್ಲಿ ಅಭಿನಯಿಸಿದ ಚಿತ್ರಗಳನ್ನೇ ನೋಡುತ್ತಿದ್ದ ಕನ್ನಡ ಸಿನಿ ಪ್ರಿಯರಿಗೆ ಒಂದು ಹೊಸ ಬಗೆಯ ಚಿತ್ರ ‘ಶಂಕರ್ ಗುರು’ ಆಗಿತ್ತು.

    1978 ರಲ್ಲಿ ತೆರೆ ಕಂಡ ಶಂಕರ್ ಗುರು ಚಿತ್ರಕ್ಕೆ ನಿರ್ದೇಶನವನ್ನು ಮಾಡಿದವರು ವಿ ಸೋಮಶೇಖರ್, ಈ ಚಿತ್ರಕ್ಕೆ ಬಂಡವಾಳ ಹೂಡಿದ್ದವರು ಪಾರ್ವತಮ್ಮ ರಾಜ್‍ಕುಮಾರ್, ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ ಚಿ. ಉದಯ್ ಶಂಕರ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ತಂದೆ, ತಾಯಿ ಮಕ್ಕಳು, ಮತ್ತು ಅಣ್ಣ ತಮ್ಮಂದಿರ ಸಂಬಂಧ ಈ ಚಿತ್ರದಲ್ಲಿ ಅದ್ಬುತವಾಗಿ ಮೂಡಿ ಬಂದಿದೆ. ಉಳಿದಂತೆ ಚಿತ್ರದ ಕಥೆ, ಚಿತ್ರಕಥೆಯ ಬಗ್ಗೆ ಎಷ್ಟು ಮಾತನಾಡಿದರು ಕಡಿಮೆಯೇ.
    ಈ ಚಿತ್ರದಲ್ಲಿ ಡಾ. ರಾಜ್‍ಕುಮಾರ್ ಜೊತೆ 'ಕಾಂಚನ ಜಯಮಾಲ' ಕಾಣಿಸಿಕೊಂಡಿದ್ದರೆ, 'ಪದ್ಮಪ್ರಿಯ' ಚಿತ್ರ ಹಿಡಿದಿಡುವಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಉಳಿದಂತೆ ಬಾಲಕೃಷ್ಣ, ವಜ್ರಮುನಿ, ತುಗೂದೀಪ ಶ್ರೀನಿವಾಸ್ ಮತ್ತು ಉಮ ಶಿವಕುಮಾರ್ ಚಿತ್ರದಲ್ಲಿದ್ದಾರೆ. ನಿರ್ದೇಶಕ ವಿ. ಸೋಮಶೇಖರ್ ಕಥೆಗೆ ಉತ್ತಮ ನಟನಾ ತಂಡವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅನುಭವಿ ತಂಡವನ್ನು ಇಟ್ಟುಕೊಂಡು ಒಂದು ಉತ್ತಮ ಚಿತ್ರವನ್ನು ನೀಡಿದ್ದಾರೆ ನಿದೇಶಕರು.
   ಇನ್ನೂ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಉಪೇಂದ್ರ ಕುಮಾರ್ ಒಂದೊಂದು ಹಾಡಿಗೂ ವಿಭಿನ್ನವಾದ ಆಯಾಮವನ್ನ ನೀಡಿರುವುದು ಚೆನ್ನಾಗಿ ಮೂಡಿಬಂದಿದೆ. ಸಾಹಿತ್ಯ ಬರೆದವರು ಚಿ ಉದಯ ಶಂಕರ್, ಚಿತ್ರದ ಎಲ್ಲಾ ಹಾಡುಗಳಿಗೆ ದ್ವನಿ ನಿಡಿರೋದು ಡಾ ರಾಜ್‍ಕುಮಾರ್ ಇವರ ಜೊತೆಗೆ ಪಿ.ಬಿ ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಹಾಡಿದ್ದಾರೆ. ರಾಜ್‍ಕುಮಾರ್ ಹಾಡಿರುವ ಈ ಚಿತ್ರದ ಎಲ್ಲಾ ಹಾಡುಗಳು ಕೇಳಲು ಹಾಯ್ ಎನಿಸುತ್ವೆ.
   1978ರಲ್ಲಿ ತೆರೆ ಕಂಡ ಶಂಕರ್ ಗುರು ಚಿತ್ರ ಬರಿ ಕನ್ನಡ ಮಾತ್ರವಲ್ಲದೆ. ತಮಿಳಿನಲ್ಲಿ ‘ತ್ರಿಶೂಲಮ್’ ಹೆಸರಿನ ಮೂಲಕ ತೆರೆಂಡಿತು ಈ ಚಿತ್ರದಲ್ಲಿ  ‘ಶಿವಾಜಿ ಗಣೇಶನ್’ ನಟಿಸಿದ್ರು, ತೆಲುಗಿನಲ್ಲಿ ‘ಕುಮಾರ ರಾಜ’ ಹೆಸರಿನ ಈ ಚಿತ್ರದಲ್ಲಿ ‘ಕೃಷ್ಣ’ ನಟಿಸಿದ್ರೆ, ಹಿಂದಿಯಲ್ಲಿ ಬಿಗ್‍ಬಿ ‘ಅಮಿತಾ ಬಚ್ಚನ್’ ನಟಿಸಿದ ‘ಮಹಾನ್’ ಚಿತ್ರ ಶಿರ್ಷಿಕೆಯಡಿಯಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಶಂಕರ್ ಗುರು ಕನ್ನಡವಲ್ಲದೆ. ಇತರ ಭಾಷೆಯಲ್ಲೂ ಕೂಡ ಯಶಸ್ವಿ ಪ್ರದರ್ಶನವನ್ನು ಕಂಡಿದ್ದು ನಾವಿಲ್ಲಿ ಕಾಣ್ಬೋದು.
   1977-78ರ ಕರ್ನಾಟಕ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಪಡೆದಿತ್ತು ಈ ಚಿತ್ರದ ಸಂಕಲನಕ್ಕಾಗಿ ಉತ್ತಮ ಸಂಕಲನಕಾರ ಪ್ರಶಸ್ತಿಯನ್ನು ಭಕ್ತವತ್ಸಲ ಪಡೆದುಕೊಂಡಿದ್ರು. ಈ ಚಿತ್ರದ ಬಗ್ಗೆ ಎಷ್ಟೂ ಹೇಳಿದರೂ ಕಡಿಮೆಯೇ.
ಮಂಜುನಾಥ್ ಹೆಚ್.ಆರ್.

ಶುಕ್ರವಾರ, ಜೂನ್ 3, 2016

ಸಿಂಗಪುರ್‍ನಲ್ಲಿ ರಾಜಾ ಕುಳ್ಳ



  ಪ್ರಥಮ ಬಾರಿಗೆ ಕನ್ನಡ ಚಿತ್ರವೊಂದು ವಿದೇಶದಲ್ಲಿ ಚಿತ್ರೀಕರಣಗೋಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿದಂತ ಚಿತ್ರ ಸಿಂಗಪೂರ್‍ನಲ್ಲಿ ರಾಜಾ ಕುಳ್ಳ. ಭಾರತ ಮತ್ತು ವಿದೇಶದಲ್ಲಿ ಚಿತ್ರೀಕರಣಗೊಂಡು, ಬಹುತೇಕ ಅಲ್ಲಿನ ಕಲಾವಿದರನ್ನೇ ಬಳಸಿಕೊಂಡು ಚಿತ್ರ ನಿರ್ಮಿಸಲಾಗಿತ್ತು. ಈ ಚಿತ್ರದಲ್ಲಿ ಸಿಂಗಪೂರ್ ನಗರವನ್ನು ಸುಂದರವಾಗಿ ತೋರಿಸಲಾಗಿದೆ.
   1978ರಲ್ಲಿ ತೆರೆಕಂಡ ಸಿಂಗಪೂರ್‍ನಲ್ಲಿ ರಾಜಾ ಕುಳ್ಳ, ಲವ್, ಸೆಂಟಿಮೆಂಟ್, ಜೊತೆಗೆ ಆಕ್ಷನ್ ದೃಶ್ಯಗಳನ್ನು ಒಳಗೊಂಡಿದೆ. ಸಿ.ವಿ ರಾಜೇಂದ್ರನ್ ನಿರ್ದೇಶನ ಮಾಡಿದ್ರೆ. ಎಂ.ಡಿ ಸುಂದರ್ ಕಥೆ ಮತ್ತು ಚಿತ್ರ ಕಥೆಯನ್ನು ಬರೆದಿದ್ದಾರೆ. ಈ ಚಿತ್ರ ಮೂಡಿಬಂದಿರುವುದು ದ್ವಾರಕೀಶ್ ಚೈತ್ರ ಪ್ರೊಡಕ್ಷನ್ ಕಂಪನಿಯಲ್ಲಿ, ನಿರ್ಮಾಪಕ ದ್ವಾರಕೀಶ್ ಅವರ ಸಾಹಸದಿಂದ ಚಿತ್ರ ವಿದೇಶದಲ್ಲಿ ಚಿತ್ರೀಕರಣಗೊಂಡ ಕನ್ನಡದ, ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
  ಚಿತ್ರಕ್ಕೆ ಸಂಗೀತ ನೀಡಿರೋದು ರಾಜನ್ ನಾಗೇಂದ್ರ, ಒಟ್ಟಾರೆಯಾಗಿ ನಾಲ್ಕು ಹಾಡುಗಳು ಈ ಚಿತ್ರದಲ್ಲಿವೆ. ಇಂಪಾದ ಸಂಗೀತದ ಜೊತೆಗೆ ಚಿ. ಉದಯ್ ಶಂಕರ್  ಸಾಹಿತ್ಯ ಚಿತ್ರದಲ್ಲಿ ಮೋಡಿ ಮಾಡುತ್ತೆ, ಕನ್ನಡ ಮತ್ತು ಚೀನಿ ಭಾಷೆಯ ಪದಗಳನ್ನು ಬಳಸಿಕೊಂಡು ಒಂದು ಹಾಡನ್ನು ಮಾಡಲಾಗಿದೆ. ಇದು ಆಗ ಒಂದು ಹೊಸ ಟ್ರೆಂಡ್ ಸೃಷ್ಟಿ ಮಾಡಿತ್ತು.
  ಈ ಚಿತ್ರದ ತಾರಾಗಣದ ಬಗ್ಗೆ ಹೇಳಲೇ ಬೇಕು, ಯಾಕೆಂದ್ರೆ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ, ಮಂಜುಳಾ ಮತ್ತು ಚೈನಾ ದೇಶದ ನಟಿಯೊಬ್ಬರು ಮತ್ತು ಬಹುತೇಕ ಅಲ್ಲಿನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಲೋಕನಾಥ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ವಜ್ರಮುನಿ ಮತ್ತು ತೂಗುದೀಪ ಶ್ರೀನಿವಾಸ್ ಖಳ ನಟರ ಪಾತ್ರದಲ್ಲಿ ಮಿಂಚು ಹರಿಸಿದ್ದಾರೆ.
  ಸಿಂಗಪೂರ್‍ನಲ್ಲಿ ರಾಜಾ ಕುಳ್ಳ ಹೆಸರೇ ಹೇಳುವಂತೆ ಸಿಂಗಪೂರ್‍ನಲ್ಲಿ ರಾಜ, ವಿಷ್ಣುವರ್ಧನ್ ಮತ್ತು ಕುಳ್ಳ ದ್ವಾರಕೀಶ್ ತನ್ನ ತಂದೆಗಾಗಿ ಹುಡುಕಾಟ ನಡೆಸುವ ಮತ್ತು ಅವರ ದಾರಿಯಲ್ಲಿ ಎದುರಾಗುವ ಅನೇಕ ತೊಂದರೆಗಳ ಸರಮಾಲೆಯನ್ನು ಚಿತ್ರ ಒಳಗೊಂಡಿದೆ. ಇಂತಹ ಸುಂದರ ಕಥೆಯನ್ನು ಚಿತ್ರ ಮಾಡಿದ ನಿರ್ದೇಶಕರು ಕನ್ನಡ ಚಿತ್ರರಂದಲ್ಲಿ ಕೆಲವೊಂದು ಹೊಸದನ್ನು ಸೃಷ್ಠಿ ಮಾಡಿದ್ದಾರೆ.
ಮಂಜುನಾಥ್ ಹೆಚ್.ಆರ್.

ಬುಧವಾರ, ಜೂನ್ 1, 2016

ಮೋಜುಗಾರ ಸೊಗಸುಗಾರ




ವಿಷ್ಣುವರ್ಧನ್ ಒಬ್ಬ ಅಸಮಾನ್ಯ ನಟ, ವಿನಯ ತುಂಬಿದ ಪಾತ್ರಗಳೇ ಇರಲಿ, ರೋಷ ತುಂಬಿದ ಪಾತ್ರಗಳೇ ಇರಲಿ, ಯಾವುದಾದರೂ ಜೀವ ತುಂಬಿ ಅಭಿನಯಿಸುವಂತಹ ಪಾತ್ರ ವಿಷ್ಣುವರ್ಧನ್‍ರದ್ದು. ಆದ್ದರಿಂದಲೇ ಕನ್ನಡಿಗರ ಹೃದಯದಲ್ಲಿ ಹೃದಯವಂತನಾಗಿ, ಅಭಿಮಾನಿಗಳ ಮನದಲ್ಲಿ ಕರುನಾಡಿನ ಸಿಂಹನಾಗಿ ರಾರಾಜಿಸುತ್ತಿದ್ದಾರೆ ವಿಷ್ಣು. ಇವರು ನಟಿಸಿದ 150ನೇ ಚಿತ್ರ ಮೋಜುಗಾರ ಸೊಗಸುಗಾರ.
  ಕನ್ನಡ ಚಿತ್ರರಂಗದಲ್ಲಿ 1995ರಲ್ಲಿ ತೆರೆಕಂಡ ರೊಮ್ಯಾಂಟಿಕ್ ಲವ್ ಸಬ್ಜೆಕ್ಟ್ ಇರುವಂತಹ ಸಿನಿಮಾ. ಮೂಲತಹ ತೆಲುಗಿನ ಎನ್.ಟಿ.ಆರ್ ನಟಿಸಿರುವ ‘ನಮ್ಮ ರಾಮುಡು ನಮ್ಮ ಭೀಮುಡು’ ಚಿತ್ರದ ಕನ್ನಡ ಅವತರಣಿಕೆ. ಅಲ್ಲಿ 1964ರಲ್ಲಿ ತೆರೆಕಂಡು ಅದ್ಬುತ ಪ್ರದರ್ಶನವನ್ನು ಕಂಡಿತ್ತು, ಇದೇ ಸಿನಿಮಾ ‘ಮೋಜುಗಾರ ಸೊಗಸುಗಾರನಾಗಿ’ ಕನ್ನಡಲ್ಲಿ ಒಳ್ಳೆಯ ಪ್ರದರ್ಶನವನ್ನು ಕಂಡಿತ್ತು.
  ಈ ಚಿತ್ರವನ್ನು ವಿಜಯ್ ನಿರ್ದೇಶನವನ್ನು ಮಾಡಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ದೊಡ್ಡ ದೊಡ್ಡ ನಟರನ್ನು ಬಳಸಿಕೊಂಡು ಮಾಡಿದಂತಹ ಸಿನಿಮಾ ಇದು, ವಿಷ್ಣುವರ್ದನ್ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡರೆ. ಇವರಿಗೆ ನಟಿಯಾಗಿ ಸೋನಾಕ್ಷಿ, ಶೃತಿ ಅಭಿನಯಿಸಿದ್ದರು. ಲೋಕೇಶ್, ದೊಡ್ಡಣ್ಣ, ಜಯಂತಿ, ಪಂಡರಿಬಾಯಿ, ಸಿಹಿಕಹಿ ಚಂದ್ರು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಒಂದು ಕಡೆ ಹಳ್ಳಿಯ ಸೊಗಡು ಮತ್ತೊಂದು ಕಡೆ, ದೊಡ್ಡ ಮನೆಯಲ್ಲಿ ದುಷ್ಟರ ಕೈಗೆ ಸಿಕ್ಕಿ ನರಳುವ ಪಾತ್ರದಲ್ಲಿ ವಿಷ್ಣು ಅಭಿನಯ, ಅವರಿಗೆ ಸಾಟಿ.
  ಈ ಚಿತ್ರದ ಒಂದೂಂದು ಹಾಡಿನ ಕ್ರೆಡಿಟ್ ಸಲ್ಲಬೇಕಾದದ್ದು ಹಂಸಲೇಖ ಅವರಿಗೆ, ಯಾಕೆಂದರೆ ಈ ಚಿತ್ರಕ್ಕೂ ಕೂಡ ಸಂಗೀತ ನಿರ್ದೇಶನ ಮಾಡಿದವರು ಹಂಸಲೇಖ ಅವರೇ, ಈ ಚಿತ್ರದಲ್ಲಿ ಐದು ಹಾಡುಗಳಿವೆ ಇದರ ಸಾಹಿತ್ಯ ಬರೆದವರು ಕೂಡ ಹಂಸಲೇಖ, ಮಾನೂ, ಮಂಜುಳು ಗುರುರಾಜ್, ಲತಾ ಹಂಸಲೇಖ, ಚಿತ್ರದ ಕನ್ನಡವೇ ನಮ್ಮಮ್ಮ ಹಾಡಿಗೆ ಹಾಡನ್ನು ಹಾಡಿದ್ದಾರೆ ವಿಷ್ಣುವರ್ಧನ್.
 ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಷ್ಣುವರ್ಧನ್‍ಗೆ ಜೋಡಿಯಾಗಿ ಸೋನಾಕ್ಷಿ ಮತ್ತು ಶೃತಿ ಅಭಿನಯಿಸಿದ್ದಾರೆ, ಒಂದು ಪಾತ್ರಕ್ಕೂ ಮತ್ತೂಂದು ಪಾತ್ರಕ್ಕೂ ಅಜಗಜಾಂತರ ವ್ಯಾತ್ಯಾಸ ವಿದ್ದರು ವಿಷ್ಣು ಎರಡು ಪಾತ್ರಗಳಲ್ಲಿನ ಅಭಿನಯ ಚೆನ್ನಾಗಿ ಮೂಡಿಂದಿದೆ. ಸೋನಾಕ್ಷಿ ಮತ್ತು ಶೃತಿಯ ಅಭಿನಯ ಚಿತ್ರದಲ್ಲಿ ಮರೆಯುವ ಹಾಗಿಲ್ಲ. ಒಂದೊಳ್ಳೆಯ ಮನರಂಜನಾತ್ಮಕ ಚಿತ್ರ ಮೋಜುಗಾರ ಸೊಗಸುಗಾರ ಚಿತ್ರ. ಕಥೆ ಹಾಡುಗಳ ಮೂಲಕ ಚಿತ್ರ ಜನರನ್ನು ತಲುಪಿದ್ದಂತೂ ನಿಜ.
ಮಂಜುನಾಥ್ ಹೆಚ್.ಆರ್.
email : manjunathahr1991@gmail.com

ಮಂಗಳವಾರ, ಮೇ 31, 2016

ಅನಂತ್‍ನಾಗ್ ಮತ್ತು ಲಕ್ಷ್ಮಿ



ಎವರ್ ಗ್ರೀನ್ ಹಿಟ್ ಅನಂತ್‍ನಾಗ್ ಮತ್ತು ಲಕ್ಷ್ಮಿ ಜೋಡಿ
  ನ್ನಡ ಚಿತ್ರರಂಗದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮಿ ಜೋಡಿ ಒಂದು ಟ್ರೆಂಡ್ ಸೃಷ್ಟಿ ಮಾಡಿತ್ತು. ಅವರ ಅಭಿನಯ, ಸಂಭಾಷಣೆ ಮತ್ತು ಅವರ ಕೆಮಿಸ್ಟ್ರಿ ಚಿತ್ರದಲ್ಲಿ ಅಷ್ಟು ಅದ್ಬುತವಾಗಿ ಮೂಡಿಬರುತ್ತಿತ್ತು. ಇವರು ಜೋಡಿಯಾಗಿ ನಟಿಸಿದ ಮತ್ತು ದೊರೈ ಭಗವಾನ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಬೆಂಕಿಯ ಬಲೆ. ಈ ಚಿತ್ರದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮಿ ಅಭಿನಯವನ್ನು ಪ್ರೇಕ್ಷಕ ಪ್ರಭು ಮರೆಯುವಹಾಗಿಲ್ಲ. 
  ಬೆಂಕಿಯ ಬಲೆ ಚಿತ್ರ ಮೂಲತಃ ಇದೇ ಹೆಸರಿನ ಟಿ.ಎಸ್ ಸುಬ್ಬರಾವ್ ಬರೆದಿರುವ ಕಾದಂಬರಿ ಆಧಾರಿತವಾಗಿದೆ. ಕಾದಂಬರಿ ಅಂದರೆ ಕೇಳಬೇಕೆ. ಚಿತ್ರದ ಒಂದೊಂದು ದೃಶ್ಯವು ಕಾದಂಬರಿಯ ತೆರೆದ ಪುಟವಾಗಿರುತ್ತೆ. ಇನ್ನೂ ಈ ಚಿತ್ರದಲ್ಲಿ ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್ ಮೊದಲಾದವರು ನಟಿಸಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ಮತ್ತು ಆರ್. ಚಿಟ್ಟಿ ಬಾಬು ಛಾಯಾಗ್ರಹಣ ಚಿತ್ರಕ್ಕಿತ್ತು.
  ಶಂಕರ್‍ನಾಗ್, ರಮೇಶ್ ಭಟ್, ಮತ್ತು ಅರುಂಧತಿನಾಗ್ ಸಹ ನಟರಾಗಿ ಮತ್ತು ಅನಂತ್‍ನಾಗ್, ಲಕ್ಷ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರ ನೋಡಿ ಸ್ವಾಮಿ ನಾವಿರೋದು ಹೀಗೆ. ಈ ಚಿತ್ರವನ್ನ ಶಂಕರ್ ನಾಗ್ ನಿರ್ದೇಶನವನ್ನು ಮಾಡಿದ್ರೆ ರಮೇಶ್ ಭಟ್ ಬಂಡವಾಳವನ್ನ ಹೂಡಿದ್ರು. ಜಿ. ಕೆ ವೆಂಕಟೇಶ್ ಸಂಗೀತ ಚಿತ್ರದಲ್ಲಿ ಮೋಡಿ ಮಾಡಿತ್ತು. ಅನಂತ್‍ನಾಗ್ ಹಾಡುವ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡು ಇಂಪಾಗಿ ಮೂಡಿಬಂದಿದೆ.
  ಚಿತ್ರಲೇಖರವರ ಕಾದಂಬರಿ ಆಧಾರಿತ ಚಿತ್ರ ಮುದುಡಿದ ತಾವರೆ ಅರಳಿತು. ಲವ್ ಅಂಡ್ ರೊಮ್ಯಾಂಟಿಕ್ ಕಥೆ ಇರುವಂತಹ ಸಿನಿಮಾ. ಇದು ಕೆ.ವಿ ಜಯರಾಮ್ ನಿರ್ದೇಶನದಲ್ಲಿ 1983ರಲ್ಲಿ ಭರ್ಜರಿ ಯಶಸ್ಸು ಕಂಡಂತಹ ಚಿತ್ರ. ಲಕ್ಷ್ಮಿ ಮತ್ತು ಅಂನಂತ್‍ನಾಗ್ ಜೋಡಿ ಮೋಡಿ ಮಾಡಿದಂತಹ ಕಾಲ. ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಎಂ. ರಂಗರಾವ್, ಉಳಿದಂತೆ ಈ  ಚಿತ್ರದಲ್ಲಿ ಅಶ್ವತ್, ಶೋಭ, ಮುಖ್ಯಮಂತ್ರಿ ಚಂದ್ರು, ಲೀಲಾವತಿ, ಮೈಸೂರು ಲೋಕೇಶ್ ಮೊದಲಾದವರು ನಟಿಸಿದ್ದರು.
  ಲಕ್ಷ್ಮಿ ಮತ್ತು ಅನಂತ್‍ನಾಗ್ ಕಾಂಬಿನೇಷನ್‍ನ ಬೇರೆ ಚಿತ್ರಗಳಿಗೆ ಹೋಲಿಕೆ ಮಾಡಿದ್ರೆ ನಾ ನಿನ್ನ ಬಿಡಲಾರೆ ಒಂದು ವಿಭಿನ್ನವಾದ ಚಿತ್ರ, ಯಾಕೆಂದ್ರೆ ಬರಿ ಲವ್, ಸೆಂಟಿಮೆಂಟ್ ಚಿತ್ರಗಳಲ್ಲೇ ಅಭಿನಯಿಸುತಿದ್ದ ಈ ಜೋಡಿ ಪ್ರಥಮ ಭಾರಿಗೆ ಹಾರರ್ ಚಿತ್ರದಲ್ಲಿ ಕಾಣಿಸಿಕೊಂಡಿತ್ತು. ಈ ಚಿತ್ರವನ್ನ ನಿರ್ದೇಶನ ಮಾಡಿದ ವಿಜಯ್ ಅನಂತ್‍ನಾಗ್‍ರನ್ನ ಒಂದು ವಿಭಿನ್ನ ಪಾತ್ರದಲ್ಲಿ ತೋರಿಸಿದ್ದಾರೆ. ಮತ್ತು ಹಿನ್ನಲೆ ಸಂಗೀತ ಕೂಡ ಈ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ.
  ಅನಂತ್‍ನಾಗ್ ಮತ್ತು ಲಕ್ಷ್ಮಿ ಜೋಡಿ ಸ್ಯಾಂಡಲ್‍ವುಡ್‍ನಲ್ಲಿ ಒಂದು ಕಾಲದಲ್ಲಿ ಮೋಡಿ ಮಾಡಿತ್ತು ಅವರಿಬ್ಬರ ಅಭಿನಯ ಅವರಿಗೆ ಸಾಟಿ. ಇಂತ ಜೋಡಿಯನ್ನ ಬೀಟ್ ಮಾಡಲು ಇನ್ನೂ ಯಾರಿಂದ ಸಾಧ್ಯ ಆಗಿಲ್ಲ. ಯಾಕೆಂದ್ರೆ ಎಲ್ಲರು ಅನಂತ್‍ನಾಗ್ ಮತ್ತು ಲಕ್ಷ್ಮಿ ಆಗೋದಕ್ಕೆ ಆಗಲ್ಲವಲ್ಲ. 
ಮಂಜುನಾಥ್ ಹೆಚ್.ಆರ್.
email.manjunathahr1991@gmail.com

ಶನಿವಾರ, ಮೇ 28, 2016

ಅಂಜದ ಗಂಡು



  ರವಿಚಂದ್ರನ್ ಕೇವಲ ಒಂದು ಪಾತ್ರಕ್ಕೆ ಸೀಮಿತವಾದ ನಟರಲ್ಲ, ಹೆಚ್ಚು ಪಾತ್ರಗಳಲ್ಲಿ ಲವ್ವರ್ ಬಾಯ್ ಆಗಿ ಕಂಡವರು, ಕ್ರಮೇಣದಲ್ಲಿ ತಾಯಿ ಮಗನ ಸೆಂಟಿಮೆಂಟ್ ಪಾತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಶ್ರೀಮಂತನ ಮಗನಾಗಿ ಬಡತನದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಅಪ್ಪನ ಬಳಿ ಚಾಲೆಂಜ್ ಮಾಡಿ ಹೊರಡುವ ಅಂಜದಗಂಡು ಚಿತ್ರ, ಇವರ ಅಭಿನಯದ ಬ್ಲಾಕ್‍ಬಸ್ಟರ್ ಚಿತ್ರಗಳಲ್ಲೊಂದು.
  1988ರಲ್ಲಿ ತೆರೆಕಂಡ ಅಂಜದಗಂಡು ಚಿತ್ರದ ಮೂಲ ತಮಿಳಿನ ‘ತಂಬಿಕ್ಕು ಎಂತ ಊರು’ ಚಿತ್ರದ ಕನ್ನಡ ಅವತರಣಿಕೆ. ತಮಿಳಿನಲ್ಲಿ ರಜನಿಕಾಂತ್ ಮತ್ತು ಮಾಧವಿ ಅಭಿನಯಿಸಿದ್ರೆ ಕನ್ನಡದಲ್ಲಿ ರವಿಚಂದ್ರನ್ ಮತ್ತು ಖುಷ್ಬು ಕಾಣಿಸಿಕೊಂಡಿದ್ದರು, ತಮಿಳಿನ ಈ ಚಿತ್ರ 1984ರಲ್ಲಿ ತೆರೆಕಂಡು ಭರ್ಜರಿ ಯಶಸ್ಸನ್ನ ಕೂಡ ಕಂಡಿತ್ತು.
  ಅಂಜದಗಂಡು ಚಿತ್ರ ನಿರ್ದೇಶನವನ್ನು ಮಾಡಿದವರು ರೇಣುಕ ಶರ್ಮ, ಇವರೇ ಇದಕ್ಕೆ ಚಿತ್ರಕಥೆ ಕೂಡ ಬರೆದಿದ್ದಾರೆ, ರವಿಚಂದ್ರನ್ ಮತ್ತು ಖುಷ್ಬು ಜೊತೆಗೆ ತೂಗುದೀಪ ಶ್ರೀನಿವಾಸ್ ಮತ್ತು ಮಾಸ್ಟರ್ ಮಂಜುನಾಥ್ ಚಿತ್ರದಲ್ಲಿ ಅಭಿನಯಿಸಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇವರ ಅದ್ಬುತ ನಟನೆಯಿಂದ ಕನ್ನಡ ಪ್ರೇಕ್ಷರನ್ನು ತಲುಪಿತ್ತು. ಆಗ ಇದೊಂದು ಹೊಸ ಟ್ರೆಂಡ್ ಆಗಿ ಬದಲಾವಣೆಯನ್ನ ಕಂಡಿತ್ತು.
  ರವಿಚಂದ್ರನ್ ಬಹುತೇಕ ಚಿತ್ರಗಳಿಗೆ ಸಂಗೀತ ನೀಡಿರುವುದು ಹಂಸಲೇಖ, ಅಂಜದಗಂಡು ಚಿತ್ರಕ್ಕೂ ಕೂಡ ಇವರೇ ಸಂಗೀತ ನೀಡಿದ್ದು, ಚಿತ್ರದ ಒಂದೊಂದು ಹಾಡುಗಳು ಹೊಸ ತೆರನಾಗಿ ಮೂಡಿಬಂದಿವೆ. ಚಿತ್ರದಲ್ಲಿ 7 ಹಾಡುಗಳಿದ್ದು ಎಸ್.ಪಿ ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್, ಬಿ.ಆರ್ ಛಾಯ, ಲತಾ ಹಂಸಲೇಖ, ರಮೇಶ್ ದ್ವನಿಯನ್ನು ನೀಡಿದ್ದಾರೆ.
  ಶ್ರೀಮಂತ ಕುಟುಂಬದ ಮಗನಾಗಿ ಹುಟ್ಟುವ ನಾಯಕ ಮನಬಂದಂತೆ ದುಂದು ವೆಚ್ಚವನ್ನು ಮಾಡ್ತನೆ ಇದನ್ನು ನೋಡಿದ ಅವನ ಅಪ್ಪಾ ಅವನಿಗೆ ಜವಾಬ್ದಾರಿ ಬರಲೆಂದು ಅವನ್ನು ಹಳ್ಳಿಗೆ ಕಳುಹಿಸ್ತಾರೆ, ಮುಂದೆ ಏನಾಗುತ್ತೆ ಅಂತ ಚಿತ್ರವನ್ನೇ ನೋಡ್ಬೇಕು. ರವಿಚಂದ್ರನ್ ಅಭಿನಯ ಬೇರೆ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ.

ಮಂಜುನಾಥ ಹೆಚ್. ಆರ್